ಗೋವಿಂದ ಭಟ್ಟರು ಸಿದ್ಧಿಯಿಂದ ಪ್ರಸಿದ್ಧಿಗೇರಿದ ಶ್ರೇಷ್ಟ ಕಲಾವಿದ : ಎಸ್. ವಿ. ಉದಯಕುಮಾರ ಶೆಟ್ಟಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಮೇ 7 , 2016
|
ಮೇ 7 , 2016
|
ಗೋವಿಂದ ಭಟ್ಟರು ಸಿದ್ಧಿಯಿಂದ ಪ್ರಸಿದ್ಧಿಗೇರಿದ ಶ್ರೇಷ್ಟ ಕಲಾವಿದ : ಎಸ್. ವಿ. ಉದಯಕುಮಾರ ಶೆಟ್ಟಿ
ಕೆಂಜೂರು :
“ವಿದ್ಯೆ ಮತ್ತು ವಿನಯತೆ ಒಬ್ಬ ವ್ಯಕ್ತಿಯಲ್ಲಿ ಹಾಸುಹೊತ್ತಾದಾಗ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ತೆಂಕು ಬಡಗುತಿಟ್ಟಿನ ಕಲಾವಿದರಿಗೆ ಆದರ್ಶ ಮಾದರಿಯಾಗಬಲ್ಲ ಕೆ. ಗೋವಿಂದ ಭಟ್ಟರು ತನ್ನ ವಿಧೇಯತೆ ವಿನಯತೆಗಳಿಂದ ಕಲಾಭಿಮಾನಿಗಳ ಮನಸ್ಸನ್ನು ಗೆದ್ದವರು. ತನ್ನ ಪ್ರಾಮಾಣಿಕ ಪರಿಶ್ರಮದಿಂದ ಎಪ್ಪತ್ತೈದರ ಇಳಿ ವಯಸ್ಸಿನಲ್ಲೂ ಯುವಕರನ್ನು ನಾಚಿಸಬಲ್ಲ ಅಭಿನಯದಲ್ಲಿ ಯಕ್ಷಗಾನ ರಂಗದಲ್ಲಿ ಮೇರು ಕಲಾವಿದರಾಗಿ ಗುರುತಿಸಿಕೊಂಡವರು. ಸಿದ್ಧಿಯಿಂದ ಪ್ರಸಿದ್ಧಿಗೇರಿದ ತೆಂಕುತಿಟ್ಟಿನ ದಶಾವಾತಾರಿ ಎಂದು ಅವರನ್ನು ಗುರುತಿಸಬಹುದು“ ಎಂದು ಮಣಿಪಾಲ ಎಂ. ಐ. ಟಿ ಪ್ರಾಧ್ಯಾಪಕ, ಯಕ್ಷಗಾನ ಚಿಂತಕ ಪ್ರೊ. ಎಸ್. ವಿ. ಉದಯ ಕುಮಾರ ಶೆಟ್ಟರು ಹೇಳಿದರು.
ಅವರು ಕೆಂಜೂರು ಬಲ್ಲೆಬೈಲುನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ವೇದಿಕೆಯಲ್ಲಿ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಮತ್ತು ಮೇಳದ ಪ್ರಭಂದಕ ಗಿರೀಶ್ ಹೆಗ್ಡೆಯವರ ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಮಾತನ್ನಾಡಿದರು. ಸನ್ಮಾನ ನೆರವೇರಿಸಿ ಮಾತನಾಡಿದ ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಿ. ಕಿಷನ್ ಹೆಗ್ಡೆಯವರು ಕಲಾವಿದರೊಂದಿಗೆ ಮೇಳದ ಸಿಬ್ಬಂದಿ ವರ್ಗವನ್ನು ಗುರುತಿಸುವುದು ಅರ್ಥಪೂರ್ಣ ಎಂದರು.
ಕಾರ್ಯಕ್ರಮ ವ್ಯವಸ್ಥಾಪಕ ಶೇಖರ ಶೆಟ್ಟಿಯವರು ಹಿರಿಯ ಕಲಾವಿದರಾದ ಕುಂಬ್ಳೆ ಶ್ರೀಧರ ರಾವ್ ಮತ್ತು ಕೆದಿಲ ಜಯರಾಮ ಭಟ್ಟರನ್ನು ಸನ್ಮಾನಿಸಿದರು. ನಾಲ್ಕೂರು ಇಂಗ್ಲೀಷ್ ಮೀಡಿಯಮ್ ಶಾಲೆಯ ಅದ್ಯಕ್ಷ ದಿನೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಧರ ಶೆಟ್ಟಿ ಕಾರ್ಯಕ್ರಮ ಸಂಯ್ಯೋಜಿಸಿ ವಂದಿಸಿದರು. ಬಳಿಕ ಶ್ರೀ ಧರ್ಮಸ್ಥಳ ಮೇಳದವರಿಂದ ``ಧರ್ಮಸ್ಥಳ ಕ್ಷೇತ್ರ ಮಹಾತ್ಮೆ `` ಯಕ್ಷಗಾನ ನೆರವೇರಿತು.
|
|
|